ಅಹಮದ್ ಷಾ
	ಈ ಹೆಸರಿನ ಮೂವರು ದೊರೆಗಳು ಭಾರತದ ಚರಿತ್ರೆಯಲ್ಲಿ ಪ್ರಸಿದ್ಧರು.

	ಮೊದಲನೆಯವ 1748-1754ರ ವರೆಗೆ ಆಳಿದ ಮೊಗಲ್ ಚಕ್ರವರ್ತಿ ಮಹಮದ್ ಷಾನ ತರುವಾಯ ಸಿಂಹಾಸನವನ್ನೇರಿದ. ರಾಜ್ಯವಾಳುವುದಕ್ಕೆ ಯಾವರೀತಿಯ ಯೋಗ್ಯತೆಯನ್ನೂ ಹೊಂದಿರದಿದ್ದ ಈತ, ದಕ್ಷಿಣದಲ್ಲಿ ಮರಾಠರ ಹಾವಳಿ, ರಾಜಧಾನಿಯಲ್ಲಿ ವಜೀರ್ ಸಿಫ್ದರ್‍ಜಂಗ್‍ನ ಪಿತೂರಿ ಒಳಸಂಚುಗಳು, ಪಶ್ಚಿಮದಲ್ಲಿ ಅಹಮದ್ ಷಾನ ದಾಳಿ, ಲೂಟಿ ಇವೆಲ್ಲವನ್ನೂ ಎದುರಿಸಬೇಕಾಯಿತು. ಹೈದರಾಬಾದಿನ ನಿಜಾಮ ಅಸಫ್ ಝಾನ ಮೊಮ್ಮಗ ಇಮಾದುಲ್ ಮುಲ್ಕ್ 1754ರಲ್ಲಿ ಇವನ ಕಣ್ಣುಗಳನ್ನು ಕೀಳಿಸಿ ಸಿಂಹಾಸನದಿಂದೋಡಿಸಿದ.

	ಎರಡನೆಯವ ಬಹಮನೀ ವಂಶದವ. ಈತ ವಿಜಯನಗರದ ಕೋಟೆಯನ್ನು ಮುತ್ತಿ ಜಯಶಾಲಿಯಾದನೆಂದು ಸುಪ್ರಸಿದ್ಧ ಇತಿಹಾಸಕಾರ ಫರಿಫ್ತ ಹೇಳುತ್ತಾನೆ.  ಕಾಕತೀಯರ ವಾರಂಗಲ್ಲನ್ನು ಸ್ವಾಧೀನಪಡಿಸಿಕೊಂಡ  (1425).  ಗುಜರಾತಿನ ಸುಲ್ತಾನನ ಮೇಲೆ ದಾಳಿಮಾಡಿ ಪರಾಭವ ಹೊಂದಿದ.  ಅವಿದ್ಯಾವಂತನಾದರೂ ವಿದ್ಯಾಪಕ್ಷಪಾತಿಯಾಗಿದ್ದ.

	1411ರಲ್ಲಿ ದೊರೆಯಾದ ಅಹಮದ್ ಷಾ ಗುಜರಾತಿನ ಸ್ಥಾಪಕ.  ಸುಮಾರು ಮೂವತ್ತು ವರ್ಷಗಳ ಕಾಲ ಮಾಳವ, ರಾಜಪುಟಾಣ, ಬಹಮನಿ ಸುಲ್ತಾನರುಗಳೊಡನೆ ಹೋರಾಡಿ ರಾಜ್ಯ ವಿಸ್ತರಿಸಿದ. ಇಂದಿನ ಅಹಮದಾಬಾದ್ ಸ್ಥಾಪಿಸಿದ.  ಮತಾಂಧನಾದರೂ ಉದಾರಿಯೆಂದು ಹೆಸರಾಗಿದ್ದಾನೆ.						
    
(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ